Wednesday, April 3, 2013

ಚುನಾವಣಾ ನೀತಿ ಸಂಹಿತೆ ಪಾಲನೆಗೆ ಸುತ್ತೋಲೆ

ಮಂಗಳೂರು ಏಪ್ರಿಲ್ 3 : ಜಿಲ್ಲೆಯಲ್ಲಿ ಚುನಾವಣಾ ಸದಾಚಾರ ಸಂಹಿತೆ ಉಲ್ಲಂಘನೆಯಾಗದಂತೆ ಕಟ್ಟೆಚ್ಚರ ವಹಿಸಲು ಸಂಬಂಧಪಟ್ಟ ಇಲಾಖೆ ಮತ್ತು ಅಧಿಕಾರಿಗಳನ್ನು ಹೊಣೆ ಮಾಡಿ ಜಿಲ್ಲಾಧಿಕಾರಿ ಶ್ರೀ ಹರ್ಷ ಗುಪ್ತ ಅವರು ಸುತ್ತೋಲೆ ಹೊರಡಿಸಿದ್ದಾರೆ.
ಸಾರ್ವಜನಿಕ ಪ್ರದೇಶಗಳನ್ನು ಬ್ಯಾನರ್ ಬಂಟಿಂಗ್ ಗಳನ್ನು ಹಚ್ಚಿ  ವಿರೂಪಗೊಳಿಸದಂತೆ (ಪ್ರಿವೆಂಷನ್ ಆಫ್ ಡಿಸ್ಫಿಗರ್ಮೆಂಟ್ ಕಾಯ್ದೆ) ತಡೆಯುವ ಹೊಣೆ ಕಂದಾಯಾಧಿಕಾರಿಗಳು ಮತ್ತು ಕಮಿಷನರ್ ನಗರ ಸ್ಥಳೀಯ ಸಂಸ್ಥೆ, ಹಾಗೂ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಗ್ರಾಮಪಂಚಾಯತಿ ಕಾರ್ಯದರ್ಶಿಗಳಿಗೆ, ಪಿಡಿಒಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸೂಕ್ತ ಮಾರ್ಗದರ್ಶನ ನೀಡಲು ಸೂಚಿಸಿದ್ದಾರೆ. ಪೊಲೀಸ್ ಕಮಿಷನರ್ ಮತ್ತು ಜಿಲ್ಲಾ ಪೋಲೀಸ್ ಅಧೀಕ್ಷಕರಿಗೂ ಪೊಲೀಸ್ ಇಲಾಖೆಗೆ ಕಟ್ಟು ನಿಟ್ಟಿನ ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ.
ಎಲ್ಲ ರಾಜಕೀಯ ಪಕ್ಷಗಳು ಪ್ರಚಾರಕ್ಕೆ ಬಳಸುವ ಎಲ್ಲ ವಾಹನಗಳು ಆರ್ ಟಿ ಒ ಅವರಿಂದ ಅಥವಾ ಈ ಸಂಬಂಧ ಸ್ಥಳೀಯ ನೋಡಲ್ ಅಧಿಕಾರಿಗಳಿಂದ ಎನ್ ಒ ಸಿ ಪಡೆದು ರಿಟರ್ನಿಂಗ್ ಅಧಿಕಾರಿಯ ಪೂವರ್ಾನುಮತಿ ಪಡೆಯಬೇಕು.
ಸಂಚರಿಸುವ ವಾಹನಗಳು ಮೈಕ್ ಅಳವಡಿಸುವಂತಿಲ್ಲ. ಬಿಳಿ ಬಣ್ಣದ ನಂಬರ್ ಪ್ಲೇಟ್ ಅಳವಡಿಸಿದ ವಾಹನಗಳನ್ನು ಬಾಡಿಗೆ ಪಡೆಯಲು ಅವಕಾಶವಿಲ್ಲ. ರೋಡ್ ಶೋಗಳಿಗೆ ತೆರೆದ ವಾಹನ ಬಳಕೆ ಇಲ್ಲ. ಕಪ್ಪುಬಣ್ಣದ ಗಾಜುಗಳಿರುವ ವಾಹನಗಳನ್ನು ಬಳಸುವಂತಿಲ್ಲ. ಸರಕು ಸಾಗಾಣೆ ವಾಹನಗಳಲ್ಲಿ ಜನರನ್ನು ಕೊಂಡೊಯ್ಯುವಂತಿಲ್ಲ. ಚುನಾವಣಾ ಆಯೋಗ ನಿಗದಿಪಡಿಸಿದ ಮಾನದಂಡಕ್ಕೆ ಅನುಗುಣವಾಗಿ ಬ್ಯಾನರ್ ಅಳವಡಿಸತಕ್ಕದ್ದು.
ಪಕ್ಷ ಹಾಗೂ ಪಕ್ಷದ ಅಭ್ಯರ್ಥಿಗಳ ವೆಚ್ಚದಲ್ಲಿ ಕಣ್ಣಿಡಲು ಈ ಕೆಳಗಿನ ಕ್ರಮಗಳನ್ನು ಜಿಲ್ಲಾಧಿಕಾರಿಗಳು ಕೈಗೊಂಡಿದ್ದಾರೆ.
ಚುನಾವಣಾ ಪ್ರಚಾರಕ್ಕೆ ಬಳಸಲ್ಪಡುವ ಎಲ್ಲ ವಾಹನಗಳು ಆರ್ ಒ ಅವರಿಂದ ಪಡೆದ ಪಾಸ್ ಗಳನ್ನು ವಾಹನಕ್ಕೆ ಕಾಣಿಸುವಂತೆ ಹಾಕಬೇಕು. ಈ ವಾಹನಗಳಲ್ಲಿ ಮತದಾರರನ್ನು ಮತದಾನದಂದು ಕರೆತಂದರೆ ಕ್ರಿಮಿನಲ್ ಅಪರಾಧವೆಂದು ಪರಿಗಣಿಸಲಾಗುವುದು. ಇಂತಹವರ ವಿರುದ್ದ ಕ್ರಮಕೈಗೊಳ್ಳಲು ಆರ್ ಟಿ ಒ, ಆರ್ ಒ, ಪೊಲೀಸ್ ಕಮಿಷನರ್ ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರ ಹೊಣೆ ಇದೆ.
ಎಲ್ಲ ಹೋಟಲ್, ಕೇಟರಿಂಗ್ ನವರು ತಾವು ಯಾವುದೇ ರಾಜಕೀಯ ಸಂಬಂಧ ಕಾರ್ಯಕ್ರಮಗಳಿಗೆ ಒದಗಿಸುವ ಆಹಾರದ ವಿವರಗಳನ್ನು 1077 ಗೆ ಕಡ್ಡಾಯವಾಗಿ ತಿಳಿಸಬೇಕು. ಕಾರ್ಯಕರ್ತರಿಗೆ ನೀಡುವ ಆಹಾರದ ವೆಚ್ಚವನ್ನು ಪಕ್ಷದ ವೆಚ್ಚಕ್ಕೆ ಹಾಕಲಾಗುವುದು. ಆದರೆ ತಿಳಿಸದೆ ಇಂತಹ ಕಾರ್ಯಕ್ರಮಗಳು ನಡೆದರೆ ಸದಾಚಾರ ಉಲ್ಲಂಘನೆ ಕೇಸನ್ನು ದಾಖಲಿಸಲಾಗುವುದು.
ಮತದಾರರಿಗೆ ಊಟ ನೀಡುವುದು ಅಪರಾಧವಾಗಿದ್ದು,  ಇಂತಹ ಪ್ರಕರಣ ವರದಿಯಾದರೆ ಐಪಿಸಿ ಸೆಕ್ಷನ್ 171 ಬಿ ಯಡಿ ಕೇಸು ದಾಖಲಿಸಲಾಗುವುದು. ಹೋಟೆಲ್ ಮತ್ತು ಕೇಟರಿಂಗ್ ಅವರನ್ನು ಹೊಣೆಯಾಗಿಸಲಾಗುವುದು.
ಇನ್ನು ಪತ್ರಿಕೆ ಮತ್ತು ದೃಶ್ಯ ಮಾಧ್ಯಮಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ನೀಡುವ  ಎಲ್ಲ ಜಾಹೀರಾತುಗಳನ್ನು ಎಂ ಸಿ ಎಂ ಸಿ (ಮೀಡಿಯಾ ಸರ್ಟಿಫಿಕೇಶನ್ ಮತ್ತು ಮಾನಿಟರಿಂಗ್ ಸಮಿತಿ) ಸಮಿತಿಗೆ ಮಾಹಿತಿ ನೀಡಬೇಕು ಇದಕ್ಕೆ ಜಿಲ್ಲಾ ಚುನಾವಣಾಧಿಕಾರಿಗಳು ಮುಖ್ಯಸ್ಥರಾಗಿರುತ್ತಾರೆ. ಈ ಸಂಬಂಧ ಅರ್ಜಿ ಸಲ್ಲಿಸುವ ವೇಳೆ ಅವರ ಜಾಹೀರಾತು ನೀಡುವ ಸಂಸ್ಥೆ, ದರಪಟ್ಟಿ, ಮತ್ತು ಒಟ್ಟು ಖರ್ಚಿನ ಮಾಹಿತಿಯನ್ನು ಹಾಗೂ ಎಷ್ಟು ಬಾರಿ ಅದನ್ನು ಪ್ರಚಾರ ಮಾಡುತ್ತಾರೆ ಎಂಬ ಸಮಗ್ರ ಮಾಹಿತಿ ಅದರಲ್ಲಿರಬೇಕು. ಮಾಹಿತಿಯ ಪ್ರತಿಗಳಿರಬೇಕು. ಪಕ್ಷ ಅಥವಾ ಅಭ್ಯರ್ಥಿಗಳು ಕಾನೂನು ಉಲ್ಲಂಘಿಸಿದರೆ ಕ್ರಮವಾಗುವ ಜೊತೆಗೆ ಇದನ್ನು ಪ್ರಕಟಿಸಿದ ಸಂಸ್ಥೆಯನ್ನು ಈ ಸಂದರ್ಭದಲ್ಲಿ ಹೊಣೆಯಾಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಸುತ್ತೋಲೆಯಲ್ಲಿ ಸ್ಪಷ್ಟ ಪಡಿಸಿದ್ದಾರೆ.
ಸೆಕ್ಷನ್ 107/110 ಸಿ ಆರ್ ಪಿಸಿ ಕಾನೂನಿನಡಿ ಹಾಜರು ಪಡಿಸುವ ವ್ಯಕ್ತಿಗಳು  ಪರೋಕ್ಷವಾಗಿ ಚುನಾವಣಾ ಕರ್ತವ್ಯ ನಿರ್ವಹಣೆಗೆ ಅಡಚಣೆಯುಂಟುಮಾಡುವವರಾಗಿದ್ದರೆ ಅವರಲ್ಲಿ ಹೆಚ್ದಿನ ಬಾಂಡ್ ಪಡೆದುಕೊಳ್ಳಬೇಕು.ವಿಫಲರಾದರೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಬೇಕು. ಇದರ ಹೊಣೆ ಸಹಾಯಕ ಆಯುಕ್ತರು ಮತ್ತು ತಹಸೀಲ್ದಾರ್ ಹೊಣೆಯಾಗಿರುತ್ತಾರೆ. 
ಜಾಮೀನು ರಹಿತ ವಾರೆಂಟ್ ಹೊರಡಿಸಿದ ಬಳಿಕ ಆರು ತಿಂಗಳಿಂದ ಅವರ ಪತ್ತೆಯಾಗಿರದಿದ್ದರೆ ಅಥವಾ ಗಂಭೀರ ಅಪರಾಧ ಮಾಡಿ ತಲೆಮರೆಸಿಕೊಂಡಿದ್ದರೆ ಅವರನ್ನು ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯಿಂದ ಕೈಬಿಡಬೇಕೆಂದು ಜಿಲ್ಲಾಧಿಕಾರಿಗಳು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಸೂಕ್ತ ಕ್ರಮಕ್ಕಾಗಿ ಸಹಾಯಕ ಆಯುಕ್ತರು (ಇಆರ್ಒ) ಪೊಲೀಸ್ ಅಧೀಕ್ಷಕರು, ಕಮಿಷನರ್ ಪೊಲೀಸ್ ಇವರಿಗೆ ಸೂಚಿಸಲಾಗಿದೆ.
ಎಲ್ಲ ಮಾಹಿತಿಗಳನ್ನು  ಕಡ್ಡಾಯವಾಗಿ ಎಲ್ಲರೂ ಕಂಟ್ರೋಲ್ ನಂಬರ್ 1077 ಗೆ ನೀಡುವುದು ಕಡ್ಡಾಯ. 
 

No comments: